Wednesday, April 28, 2010

ವಂಶವೃಕ್ಷ ಒಂದು ಸಿಂಹಾವಲೋಕನ -೧


ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವೇ ಅಲ್ಲದೆ ಭಾರತೀಯ ಸಾರಸ್ವತ ಲೋಕದಲ್ಲೇ ಅಗ್ರಗಣ್ಯರು ಜನಪ್ರಿಯರೂ ಆಗಿರುವ ಕಾದಂಬರಿಕಾರರು ಎಸ.ಎಲ್.ಭೈರಪ್ಪನವರು . ಅವರ ಅತ್ಯುತ್ತಮ ಕಾದಂಬರಿಗಳನ್ನು ಗಮನಿಸಿದಾಗ ತನ್ನದೇ ಆದ ವಿಶಿಷ್ಟ ಸ್ಥಾನ ಗಳಿಸಿರುವ ಕಾದಂಬರಿ ವಂಶವೃಕ್ಷ . ೧೯೬೫ ರಲ್ಲಿ ಪ್ರಕಟಣೆಗೊಂಡ ಇದು ೨೦೦೯ ರ ವರೆಗೂ ಸತತವಾಗಿ ಮರುಮುದ್ರಣ ಕಾಣುತ್ತಿರುವುದು , ಕಾದಂಬರಿಯ ಜನಪ್ರಿಯತೆಗೆ ಸಾಕ್ಷಿ .
ವಂಶವೃಕ್ಷದ ಬಗೆಗೆ ಗಮನಿಸುವುದಾದರೆ , ಮೊದಲಿಗೆ ಈ ಕಾದಂಬರಿಯ ಕಾಲ ದೇಶಗಳನ್ನೂ ಗಮನಿಸಬೇಕು . ಈ ಕಥೆಯು ನಡೆಯುವ ಕಾಲ ೧೯೪೦-೧೯೬೦ ರ ಹದಿನೈದು ಇಪ್ಪತ್ತು ವರ್ಷಗಳ ಅವಧಿ . ಇದರ ದೇಶವು ಬಹಳ ಸಂಕ್ಷಿಪ್ತವಾದ ಮೈಸೂರು ನಂಜನಗೂಡುಗಳ ನಡುವೆ . ಭೌಗೋಳಿಕವಾಗಿ ಕಥೆಯ ವಿಸ್ತಾರ ಬಹಳ ಕಡಿಮೆಯಾದರೂ ಭಾವನಾತ್ಮಕ ಪ್ರಪಂಚದಲ್ಲಿ ಅತಿ ಆಳವೂ ವಿಸ್ತಾರವೂ ಆಗಿದೆ . ಶ್ರೋತ್ರಿಯರಿಗೆ ಉಂಟಾಗುವ ಆತ್ಮ ಭರ್ತ್ಸನೆ , ಸಮಾಜದಲ್ಲಿ ನೆಲೆಯೂರಿರುವ ವಿಚಾರಗಳ ವಿರುದ್ಧ ಹೊರಟಾಗ ಕಾತ್ಯಾಯಿನಿಯಲ್ಲಿ ಉಂಟಾಗುವ ಒಳತೋಟಿ ಮುಂತಾದವುಗಳ ವಿವರಣೆ ಚಿತ್ರ ಸದೃಶವಾಗಿ ಕಣ್ಣಮುಂದೆ ನಡೆಯುವಂತಿವೆ. ಭೈರಪ್ಪನವರ ಇತರೆ ಕಾದಂಬರಿಯಂತೆ ಇಲ್ಲೂ ಯುಗ ಸಂಧಿ ಕಾಲದಲ್ಲಿ ಉಂಟಾಗುವ ಮೌಲ್ಯ ಸಂಘರ್ಷವನ್ನು ಚಿತ್ರಿಸಿ ಆ ಮೂಲಕ ಸತ್ಯಶೋಧನೆಯಲ್ಲಿ ಲೇಖಕರು ತೊಡಗುತ್ತಾರೆ . ಉಕ್ಕಿ ಬರುವ ಕಪಿಲೆಯ ಪ್ರವಾಹವನ್ನು ಮೌಲ್ಯ ಸಂಘರ್ಷದ ಭೌತಿಕ ಪ್ರತೀಕವಾಗಿ ಲೇಖಕರು ಉಪಯೋಗಿಸಿದ್ದಾರೆ .ಪ್ರವಾಹ ನಿಂತಮೇಲು ಅವಿಚ್ಚಿನ್ನವಾಗಿ ಸಾಗುವ ನದಿಯ ಚಲನೆಯು ಸತತವಾಗಿ ಸಾಗುವ ಧರ್ಮದ ಸ್ರೋತಕ್ಕೆ ದ್ಯೋತಕವಾಗಿದೆ. ಕಾದಂಬರಿಯಲ್ಲಿ ಮುಖ್ಯವಾಗಿ ಚರ್ಚಿತವಾಗುವ ಪ್ರಶ್ನೆ . ಒಂದು ಸಂತತಿಯ ನಿಜವಾದ ಬಾಧ್ಯಸ್ತರು ಯಾರು ಎಂಬುದು . ತಮ್ಮ ಜೀವನವನ್ನೇ ಸಂಶೋಧನೆ ಹಾಗು ಕೃತಿರಚನೆಗಾಗಿ ಮುಡುಪಾಗಿಟ್ಟ ಸದಾಶಿವರಾಯರ ಮಗ ಪ್ರುತ್ವಿಗೆ ಅವರ ಕೃತಿಗಳು ಯಾವ ಉಪಯೋಗಕ್ಕೂ ಬಾರದ ಪುಸ್ತಕಗಳಾಗುತ್ತವೆ. ಕರುಣಾರತ್ನೆ , ಲಂಕೆಗೆ ಹಿಂದಿರುಗುವಾಗ ನಿನ್ನ ತಂದೆಯ ಪುಸ್ತಕವನ್ನು ಓದು ಎಂದು ಪ್ರುತ್ವಿಗೆ ಹೇಳಿದಾಗ " ನಾನು ಸೈನ್ಸ್ ವಿದ್ಯಾರ್ಥಿ" ಎಂದು ಹೇಳಿ ಇಡೀ ಒಂದು ಪರಂಪರೆಗೆ ಬೆನ್ನು ಮಾಡುವ ರೀತಿ , ಕಾದಂಬರಿಯ ಎಲ್ಲ ಸಾರವನ್ನು ಹಿಡಿದಿಟ್ಟಿರುವ ಒಂದು ಮಾರ್ಮಿಕ ಘಟ್ಟ ಎಂದರೆ ತಪ್ಪಾಗಲಾರದು. ಅಲ್ಲಿ ಮೂಡುವ irony ಅತಿ ಉತ್ಕೃಷ್ಟವಾದ , ಮನಕಲಕುವಂತಹದ್ದು . ಆದರೆ ಭಾರತಕ್ಕೇ ಪರಕೀಯಳಾದ ಕರುಣಾರತ್ನೆ ,ರಾಯರ ಭಾರತೀಯ ಸಂಸ್ಕೃತಿಯ ಬಗೆಗಿನ ಸಂಶೋದನೆಯಲ್ಲಿ ಸಹಕರಿಸಿ , ಮೋಕ್ಷ ಪತ್ನಿಯಂತೆ ರಾಯರನ್ನು ಸೇವಿಸುವ ಬಗೆ , ಆಕೆಯನ್ನು ರಾಯರ ಪರಂಪರೆಯ ನಿಜವಾದ ಹಕ್ಕುದಾರಿಣಿಯನ್ನಾಗಿ ಮಾಡುತ್ತದೆ . ಅಂತೆಯೇ ತನ್ನ ಹುಟ್ಟಿನ ಬಗ್ಗೆ ಸತ್ಯವನ್ನರಿತ ಶ್ರೋತ್ರಿಯರಿಗೆ , ಅವರು ಅತಿ ಪಾವಿತ್ರ್ಯವೆಂದು ನಂಬಿದ್ದ ಅವರ ವಂಶಕ್ಕೆ ಅವರ ಸಂಬಂಧವೇ ಇಲ್ಲ ವೆಂದು ಅವರಿಗೆ ತಿಳಿದಾಗ , ಅವರಿಗಾಗುವ ಆಘಾತ ಎಂತದ್ದು ಎಂಬುದು ಊಹಿಸಲೂ ಅಸಾಧ್ಯವಾದುದು . ಆದರು ಅವರು ದೃತಿಗೆಡದೆ ತಮ್ಮ ಕರ್ತವ್ಯವನ್ನು ಪಾಲಿಸಿ , ನಿರ್ವಹಿಸುವ ರೀತಿ , ಸಾನತನ ಧರ್ಮದಿಂದ ಅವರಿಗೆ ಒದಗಿದ ಸಂಸ್ಕಾರಕ್ಕೆ ಸಾಕ್ಷಿ .
(ಮುಂದುವರೆಯುವುದು)
ಶಶಾಂಕ್ .ಮ.ಅ

No comments:

Post a Comment