Wednesday, April 14, 2010

ಏಕ ವ್ಯಕ್ತಿಯ ವಿರಾಟ್ ಸ್ವರೂಪದ ಯಕ್ಷಗಾನ


ಯಕ್ಷಗಾನವೆಂದರೆ ರಾತ್ರಿಯಿಡಿ ನಡೆದು ಸೂರ್ಯೋದಯ ಕಾಲಕ್ಕೆ ಮಂಗಳ ಹಾಡುವ ಪರಿಪಾಠ ಸರ್ವೇ ಸಾಮಾನ್ಯ . ಆದರೆ ಮಂಟಪ್ ಪ್ರಭಾಕರ ಉಪಾಧ್ಯಾರ ಯಕ್ಷಗಾನವೆಂದರೆ , ಸರಿ ಸುಮಾರು ೭-೮ ಘಂಟೆಯ ಪ್ರಸಂಗವನ್ನು ಒಬ್ಬರೇ ವ್ಯಕ್ತಿ,ಪ್ರಸಂಗದ ನಾಟ್ಯ , ಪದ್ಯ ,ಅಭಿನಯ ಹೀಗೆ ಕಲೆಯ ಯಾವುದೇ ಅಂಗಕ್ಕೂ ಭಂಗ ಬಾರದಂತೆ ಕೇವಲ ಒಂದೂವರೆ ಘಂಟೆಯ ಅವಧಿಯಲ್ಲಿ ಅಭಿನಯಿಸುವ ವಿಶೇಷ.
ನಾನು ನೋಡಿದ ಅವರ "ಶೂರ್ಪನಖಿ" ಮತ್ತು "ಮಂಥರೆಯ ದುರ್ಮಂತ್ರ". ಎರಡೂ ಪ್ರಸಂಗಗಳಲ್ಲಿ ಮನಸೆಳೆಯುವ ಅಭಿನಯವನ್ನು ಮಂಟಪರು ನೀಡಿದರು. ಶೂರ್ಪನಖಿಯ ಪಾತ್ರದಲ್ಲಿ ಅವರ ಭಾವಾಭಿವ್ಯಕ್ತಿ , ಭಾಗವತಿಕೆಯವರೊಂದಿಗೆ ಸಮಯೋಚಿತವಾದ , ಹಾಗು ತಿಳಿ ಹಾಸ್ಯಭರಿತ ಪ್ರಶ್ನೋತ್ತರ ಸಂವಾದ ಹನಿ ಹನಿ ಮಳೆಯ ನಡುವೆಯೂ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಯಿತು . ಸ್ತ್ರೀವೇಶ ಧರಿಸಿ ರಂಗಕ್ಕೆ ಪ್ರವೇಶಿಸುವ ಮಂಟಪರ ಭಾವಭಂಗಿ , ನೃತ್ಯದಲ್ಲಿ ಅವರ ನಯ , ಕಣ್ಣಿನ ಓರೆನೋಟ,ಸ್ತ್ರೀಯ ಪರಕಾಯ ಪ್ರವೇಶ ಮಾಡಿದಂತಹ ಅನುಭವ ನೀಡುತ್ತಿತ್ತು . ಸುಮಾರು ಒಂದೂಕಾಲು ಘಂಟೆ ನಡೆದ ಈ ಪ್ರಸಂಗದನಂತರ ಪ್ರಾರಂಭವಾದದ್ದು ಮಂಥರೆಯ ದುರ್ಮಂತ್ರ .
ಮಂಥರೆಯ ಪಾತ್ರವಹಿಸಿದ್ದ ಚಪ್ಪರದಮನೆ ಶ್ರೀಧರ್ ಹೆಗಡೆ . ಗೂನು ಬೆನ್ನಿನ ಸೊಟ್ಟ ಮೂತಿಯ ಮುದುಕಿಯ ವೇಷದಲ್ಲಿ ಪ್ರವೇಶಿಸಿ ತಮ್ಮ ನೃತ್ಯದಿಂದ ಎಲ್ಲರನ್ನು ನಗಿಸಿದರು . ಮುದುಕಿಯ ಪಾತ್ರಕ್ಕೆ ಈ ನೃತ್ಯ ಕೊಂಚ ಅಸಮಂಜವೆನಿಸಿದರೂ , ಮನರಂಜನೆಯೇ ಮುಖ್ಯವಾದ ಜಾನಪದ ಕಲೆಯಾದ ಯಕ್ಷಗಾನದಲ್ಲಿ ತಾರ್ಕಿಕ ಪ್ರಶ್ನೆಗಳು ಸಾಧುವಲ್ಲ . ಕೈಕೇಯಿಯ ಪಾತ್ರದಲ್ಲೂ ಮಂಟಪರು ಉತ್ತಮ ಅಭಿನಯ ನೀಡಿದರು . ತನ್ನ ಪಾತ್ರಕ್ಕೆ ತಕ್ಕಂತ ಭಾವಭಂಗಿ , ಧ್ವನಿಯಲ್ಲಿನ ಬದಲಾವಣೆಗಳಲ್ಲಿ ಮಂಥರೆಯ ಪಾತ್ರ ಅದ್ಭುವಾಗಿತ್ತು . ಹೆಗಡೆಯವರು ಕೈಕೇಯಿ ಗೆ ಸಮನಾಗಿ ಕೆಲವೊಮ್ಮೆ , ಕೈಕೆಯಿಯನ್ನೂ ಮೀರಿಸುವಂತ ಪ್ರೌಡಿಮೆ ತೋರಿದರು . ಭಾಗವತಿಕೆಯವರು ಭೈರವಿ,ತೋಡಿ , ಕಾಪಿ ಇಂತಹ ಶಾಸ್ತ್ರೀಯ ರಾಗಗಳನ್ನು ಅಳವಡಿಸಿ ಸುಶ್ರಾವ್ಯವಾಗಿ ಹಾಡಿದ ಪದ್ಯಗಳು ಕಲೆಗಟ್ಟಿದವು . ಮೃದಂಗ ಹಾಗು ಚಂಡೆ ಒಳ್ಳೆಯ ಲಯ ಸಹಕಾರ ನೀಡಿದವು . ಸಾಧಾರಣವಾಗಿ ಕುಣಿತ ಹಾಗು ಅಬ್ಬರದ ಮಾತುಗಳಿಂದ ತುಂಬಿರುವ ಯಕ್ಷಗಾನವನ್ನು ಮೃದುಗೊಳಿಸಿ ಪ್ರಸ್ತುತ ಪರಿಸ್ತಿತಿಗೆ ಹೊಂದಿಕೆಯಾಗುವಂತೆ ಕಡಿಮೆ ಸಮಯದಲ್ಲಿ , ಕಳೆಯ ಯಾವ ಅಂಗಕ್ಕೂ ದೋಷಬಾರದಂತೆ ಮಂಟಪರ ಪ್ರಯತ್ನ ಶ್ಲಾಘನೀಯ . ಅದನ್ನು ನಿರ್ದೇಶಿಸಿದ ಶತಾವಧಾನಿ ಗಣೇಶ್ ರ ಸಹಾಯ ಹಾಗು ಮಾರ್ಗದರ್ಶನ ಸ್ತುತ್ಯರ್ಹವಾದುದು . ಇಂತಹ ಕಲಾ ಪ್ರಕಾರವು ಹೆಚ್ಚು ಹೆಚ್ಚು ಜನರನ್ನು ತಲುಪಿ ಜನಮನ್ನಣೆ ಗಳಿಸುವ ಅಗತ್ಯ ಇಂದು ಕಾಣುತ್ತಿದೆ .

ಶಶಾಂಕ್ .. .

No comments:

Post a Comment