Friday, May 14, 2010

ವಂಶವೃಕ್ಷ ಒಂದು ಸಿಂಹಾವಲೋಕನ -೨


ಕಾದಂಬರಿಯಲ್ಲಿ ಮುಖ್ಯವಾಗಿ ಬರುವ ಪಾತ್ರಗಳು ಶ್ರೀನಿವಾಸ ಶ್ರೋತ್ರಿ , ಕಾತ್ಯಾಯಿನಿ , ಸದಾಶಿವರಾಯರು , ರಾಜಾರಾಯ , ನಾಗಲಕ್ಷ್ಮಿ , ಕರುಣರತ್ನೆ , ಪೃಥ್ವಿ , ಚೀನೀ . ಈ ಪಾತ್ರಗಳನ್ನೂ ಗಮನಿಸಿದಾಗ ಒಂದು ವಿಷಯ ಸ್ಪಷ್ಟವಾಗುತ್ತದೆ . ಇವುಗಳಲ್ಲಿ ದುಷ್ಟರಾದ , ನೀಚರಾದ , ಕ್ಷುದ್ರರಾದ ಯಾವ ವ್ಯಕ್ತಿಯೂ ಗೋಚರಿಸುವುದಿಲ್ಲ . ಆದರೂ ಎಲ್ಲರ ಜೀವನದಲ್ಲೂ ಅನುಭವಿಸುವಂತ ತೊಳಲಾಟ ಮಾನಸಿಕ ವೇದನೆ ಸುಸ್ಪಷ್ಟವಾಗುತ್ತದೆ . ಇದು ಏಕೆ ಹೀಗೆ ಎಂಬುದಕ್ಕೆ ಯಾವ ಉತ್ತರವೂ ತಿಳಿಯುವುದಿಲ್ಲ , ಪ್ರಾಯಶಃ ಇದು ಇರುವುದು ಹೀಗೆ ಎಂದು ಒಪ್ಪಿಕೊಂಡು ಜೀವನವನ್ನು ನಡೆಸುವುದೊಂದೇ ದಾರಿಎಂದೆನಿಸುತ್ತದೆ .


ಶ್ರೀನಿವಾಸ ಶ್ರೋತ್ರಿಯರು ಸನಾತನ ಧರ್ಮವೇ ಮೂರ್ತಿವೆತ್ತಂತೆ ಮೂಡಿರುವ ಪಾತ್ರ . ಶ್ರೋತ್ರಿಯರ ಧೀಮಂತಿಕೆಯನ್ನು ಲೇಖಕರು ಕಾದಂಬರಿಯ ೨೦ ನೇ ಅಧ್ಯಾಯದಲ್ಲಿ ಕರುಣಾರತ್ನೆಯ ಮೂಲಕ ಮಾಡಿಸುತ್ತಾರೆ . ಆ ವಾಕ್ಯಗಳು ಹೀಗಿವೆ "ಭಾರತೀಯ ಪುರಾಣ , ಸಾಹಿತ್ಯ ಮೊದಲಾದವುಗಳನ್ನು ಅವಳು ಗ್ರಂಥಗಳಲ್ಲಿ ಓದಿ ವ್ಯಾಸಂಗ ಮಾಡಿದ್ದಳು . ಅವುಗಳಲ್ಲಿ ಬರುವ ಭೀಷ್ಮ , ವಸಿಷ್ಠ , ಯುಧಿಷ್ಠಿರ , ರಾಮ , ಮೊದಲಾದ ಪಾತ್ರಗಳ ಸ್ಪಷ್ಟ ಕಲ್ಪನೆ ಅವಳಿಗಿತ್ತು . ಯಾವುದಾದರು ವಿಚಿತ್ರ ಸನ್ನಿವೇಶದಲ್ಲಿ ಆ ಪಾತ್ರಗಳನ್ನಿಟ್ಟರೆ ಅವರು ಹೇಗೆ ವರ್ತಿಸುತ್ತಾರೆಂದು ಅವಳು ತಪ್ಪಿಲ್ಲದೆ ಹೇಳಿಬಿಡಬಲ್ಲವಲಾಗಿದ್ದಳು . ಈಗ ಶ್ರೋತ್ರಿಯರನ್ನು ನೋಡಿ ಆ ಪಾತ್ರ ನೆನಪಿಗೆ ಬರುತ್ತಿತ್ತು ". ಶ್ರೋತ್ರಿಯರು ಸನಾತನ ಧರ್ಮವನ್ನು ಕೇವಲ ಆಚರಿಸುತ್ತಿರಲಿಲ್ಲ ಬದಲಾಗಿ ಅದನ್ನೇ ಜೀವಿಸುತ್ತಿದ್ದರು ಎಂಬುದನ್ನು ಅಭಾರತೀಯವಾದ ಮತ್ತೊಂದು ಪಾತ್ರದಿಂದ ವ್ಯಕ್ತಪಡಿಸಿರುವುದು ಲೇಖಕರ ಹೆಚ್ಚುಗಾರಿಕೆ . ಭಾರಾತೀಯ ಸಂಸ್ಕೃತಿ ನಂಬಿರುವ ಪುರುಷಾರ್ಥ ಚತುಷ್ಟಯಗಳು- ಧರ್ಮಾರ್ಥಕಾಮಮೊಕ್ಷಗಳು , ಇವೇ ಶ್ರೋತ್ರಿಯರು ಪ್ರತಿಪಾದಿಸುವ ಶಾಶ್ವತವಾದ ಮೌಲ್ಯಗಳು . ಕಾತ್ಯಾಯಿನಿ ಮತ್ತೊಂದು ವಿವಾಹ ಮಾಡಿಕೊಳ್ಳುವುದೆಂದು ಯೋಚಿಸಿ ಆ ವಿಷಯವನ್ನು ಮಾವನವರಿಗೆ ತಿಳಿಸಲು ಸುಮಾರು ೧೬ ಪುಟಗಳಷ್ಟು ಧೀರ್ಘವಾದ ಪತ್ರ ಬರೆಯುತ್ತಾಳೆ . ಶ್ರೋತ್ರಿಯರು ಅದನ್ನು ನೋಡಿ ಯಾವ ಮಾತನ್ನು ಆಡದೆ ಸುಮ್ಮನಾಗುತ್ತಾರೆ . ನಂತರ ಕಾತ್ಯಾಯಿನಿಗೆ ತನ್ನ ಅಭಿಪ್ರಾಯ ತಪ್ಪು ಎಂಬ ಭಾವನೆ ಬಂದು , ಶ್ರೋತ್ರಿಯರ ಬಳಿ ಕ್ಷಮೆ ಯಾಚಿಸುತ್ತಾಳೆ . ಆಗ ಶ್ರೋತ್ರಿಯರು , ಇದು ಎಲ್ಲರಿಗೂ ಆಗುವಂತಹದ್ದು ಅದನ್ನ ಮರೆತುಬಿಡು , ಪತ್ರ ಹರಿದು ಹಾಕು ಎಂಬುವುದು ಮೇಲ್ನೋಟಕ್ಕೆ ಸಾಧಾರಣ ಮಾತಿನಂತೆ ಕಂಡರೂ , ಅದರ ಧೀಮಂತಿಕೆಯ ನೋಡಿದಾಗ ಅವು ವೇದಮಂತ್ರ ಸದೃಶವಾದ ಉಕ್ತಿ ಎಂದು ಗೋಚರಿಸುತ್ತದೆ . ಕಾಯಾಯಿನಿ ಮಗುವನ್ನು ಯಾಚಿಸಲು ಬಂದಾಗ , ನಿನಗೆ ಬೇರೆ ಗಂಡ ಸಿಕ್ಕಿರಬಹುದು ಆದರೆ ನನಗೆ ಬೇರೆ ಮಗ ಸಿಗಲಿಲ್ಲ, ಆದರು ನಿನ್ನ ಮಗು ಕರೆದುಕೊಂಡು ಹೊಗುವ ಅಧಿಕಾರ ನಿನಗಿದೆ ಎನ್ನುತ್ತಾರೆ . ಇದು ಅವರ ಸಂಸ್ಕಾರಕ್ಕೆ ಸಾಕ್ಷಿ . ಧರ್ಮವನ್ನು ಬಿಡದೆ ಅವರು ನಡೆಯುವ ಹಾದಿ ಎಲ್ಲರಿಗೂ ಮಾರ್ಗದರ್ಷಕವಾದದ್ದು . ತಮಗೆ ಆಸ್ತಿಯ ಮೇಲೆ ಹಕ್ಕಿಲ್ಲ ಎಂದು ತಿಳಿದಾಗ ಸರ್ವಸ್ವವನ್ನು ಸದ್ವಿನಿಯೋಗ ಮಾಡುತ್ತಾರೆ . ಮನೆಯ ಕೆಲಸದವಳಾದ ಲಕ್ಷ್ಮಿಗೂ ಆಸ್ತಿಯಲ್ಲಿ ಪಾಲು ನೀಡುತ್ತಾರೆ . ಪಿತೃ ಸ್ಥಾನದಲ್ಲಿ ನಿಂತು ಚೀನಿಯ ವಿದ್ಯಾಭ್ಯಾಸ ಹಾಗು ಅಗತ್ಯಗಳನ್ನು ನೋಡಿಕೊಳ್ಳುತ್ತಾರೆ . ಆಸ್ತಿಯ ಸರಿಯಾದ ನಿರ್ವಹಣೆಯಲ್ಲಿ ಅರ್ಥ ಕಾಮಗಳನ್ನು ಪರಿಪಾಲಿಸಿ , ಆಶ್ರಮ ಧರ್ಮಕ್ಕೆ ಯಾವುದೇ ಚ್ಯುತಿ ಬಾರದಂತೆ ನೋಡಿಕೊಳ್ಳುತ್ತಾರೆ . ತಮ್ಮ ಎಲ್ಲ ಜವಾಬ್ದಾರಿಗಳನ್ನು ಪಾಲಿಸಿದ ನಂತರ ಸನ್ಯಾಸ ಪರಿಗ್ರಹಿಸಲು ಮುಂದಾಗಿ , ಮೋಕ್ಷ ಮಾರ್ಗ ಹಿಡಿಯುತ್ತಾರೆ . ಹೀಗೆ ಮೌಲ್ಯಗಳ ಮೂರ್ತ ರೂಪವಾಗಿ ಕಾದಂಬರಿಯಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತದೆ ಶ್ರೋತ್ರಿಯರಪಾತ್ರ .

ಕಾತ್ಯಾಯಿನಿ ಶ್ರೋತ್ರಿಯರ ಸೊಸೆ . ಆಕೆಯ ಪತಿ ಕಪಿಲೆಯ ಪ್ರವಾಹಕ್ಕೆ ಬಲಿಯಾಗಿ ಮದುವೆಯಾದ ಒಂದೆರಡು ವರ್ಷಗಳಲ್ಲೇ ವಿಧವೆಯಾದವಳು . ತನ್ನ ಪತಿಯು ಅರ್ಧಕ್ಕೆ ನಿಲ್ಲಿಸಿದ್ದ ಬಿ. ಎ . ಪರೀಕ್ಷೆಯನ್ನು ತಾನು ಮುಗಿಸಿ ತನ್ಮೂಲಕ ಆತನ ಆತ್ಮಕ್ಕೆ ಶಾಂತಿ ದೊರಕಿಸಬೇಕೆಂಬುದು ಆಕೆಯ ನಂಬಿಕೆ . ಹೀಗಾಗಿ ಮೈಸೂರಿನ ಕಾಲೇಜಿಗೆ ಸೇರುತ್ತಾಳೆ . (ಕೊನೆಯ ಭಾಗ ಮುಂದಿನ post ನಲ್ಲಿ)
ಶಶಾಂಕ್ . ಮ .ಅ

Monday, May 3, 2010

ಇಜ್ಜೋಡು ನೋಡು , ವಿಲ ವಿಲ ಒದ್ದಾಡು


ಸಿಡಿಲ ಪೊಟ್ಟಣಗಟ್ಟಿ ಸೇಕವ ಕೊಡುವರೇ ಹರನೇತ್ರ ವಹ್ನಿಯೋಲಡಬಳವ ಸುಡುಬಗೆದೆಲಾ , ಹೆಡೆತಲೆಯ ತುರಿಸುವರೆ ಹಾವಿನ ಪಡೆಯನಕಟ (ಸಿಡಿಲ ಪೊಟ್ಟಣಕಟ್ಟಿ ಶಾಕವನು ಯಾರಾದರೂ ಕೊಡುವರೇ , ಹರನೇತ್ರದ ಬೆಂಕಿಯಲ್ಲಿ ಮಾಮ್ಸವಸುಡಲಾದೀತೇ ಹಾವಿನಹೆಡೆಯಿಂದ ತಲೆಯ ತುರಿಸಿಕೊಳ್ಳಲು ಸಾಧ್ಯವೇ ) ಇವು ಯಾರು ಮಾಡಲು ಧೈರ್ಯವ ತೋರದಂತ ವಿಚಾರಗಳು . ಪ್ರಾಯಶಃ ಕುಮಾರವ್ಯಾಸ ಇಜ್ಜೋಡು ಚಲನಚಿತ್ರ ನೋಡಿದ್ದರೆ , ಇಜ್ಜೋಡನೀಕ್ಷಿಸಿ ಬೆಪ್ಪರಾಗದವರಿರ್ವರೆ ! ಎಂದು ಸೇರಿಸುತ್ತಿದ್ದನೇನೋ . ಏಕೆಂದರೆ ಎಂ .ಎಸ್. ಸತ್ಯು ನಿರ್ದೇಶನದ ಇಜ್ಜೋಡು ಚಲನಚಿತ್ರವ ವೀಕ್ಷಿಸುವವರೂ ಮಾಡುವುದು ಮೇಲೆ ತಿಳಿಸಿರುವಂತ ಮೂರ್ಖ ಕೆಲಸಗಳನ್ನು ಮಾಡಿದಂತಯೇ . ೯೦ ನಿಮಿಷದ ಸಿನಿಮಾ ಮುಗಿಯುವ ಹೊತ್ತಿಗೆ ೯೦ ಮನ್ವಂತರಗಳ ದಾಟಿ ಹೊರಬಂದಂತಹ ಅನುಭವ ನೀಡುತ್ತದೆ . ತೀರ ಕಳಪೆ ಚಿತ್ರಕಥೆ , ಮನಸ್ಸನ್ನು ಮುಟ್ಟದ ಸಂಭಾಷಣೆ , ಹೊಗಳಲು ಯೋಗ್ಯವಲ್ಲದ ಛಾಯಾಗ್ರಹರಣ , ಅನಗತ್ಯ ,ಅಸಂಬದ್ಧ , ಹಾಡು ಇದು ಚಿತ್ರದ highlights . ಫಿಲಂ ಫೇರ್ , ಪದ್ಮಶ್ರಿ ದಂತಹ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ನಿರ್ದೇಶಕ ಇಂತ ಚಿತ್ರವನ್ನೂ ನಿರ್ದೇಶಿಸಿದ್ದಾರೆ ಎಂದು ನನಗೆ ನಂಬಲೂ ಸಾಧ್ಯವಾಗುತ್ತಿಲ್ಲ . ಚಿತ್ರದಲ್ಲಿ ಅಭಿನಯಿಸಿರುವ ಪಾತ್ರಧಾರಿಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ . ಮೀರಾ ಜಾಸ್ಮಿನ್ ಳಿಗೆ ಕನ್ನಡ ಬಾರದಿದ್ದರೂ ಆಕೆಯೇ ಡಬ್ ಮಾಡಿರುವುದು ಶ್ಲಾಘನೀಯವಾದ ವಿಷಯವೇ . ತನ್ನ ಪಾತ್ರಕ್ಕೆ ಆಕೆಯಾಗಲಿ , ಅನಿರುದ್ , ರಾಮಕೃಷ್ಣ ಆಗಲಿ ಯಾವುದೇ ಮೋಸ ಮಾಡಿಲ್ಲ . ಚಿತ್ರದ ಪ್ರಾರಂಭದಲ್ಲಿ ಬರುವ "ಸಮರ" ಎಂಬ ಹಾಡಿನ ಹಿನ್ನಲೆಯ ಕುರೂಪ ನೃತ್ಯ , ಮಂಡ್ಯ ರಮೇಶರ ಪಾತ್ರದ ಮೂಢತನದ ಪ್ರದರ್ಶನದ ಅಗತ್ಯವನ್ನು ಆ "ಸತ್ಯ"ನಾರಾಯಣನೆ ಬಲ್ಲ . ಚಿತ್ರದ ಕಥೆಯು ಅಜ್ಜಂಪುರ ಸೀತಾರಾಮ ರವರ ಸಣ್ಣಕತೆಯಾದ "ನಾನು ಕೊಂದ ಹುಡುಗಿ " ಯನ್ನು ಶೇಕಡ ೮೫ ರಷ್ಟು ಹೋಲುತ್ತದೆ , ಚಿತ್ರದ ಕತೆಯು ಅದರಿಂದ ಪ್ರೇರಿತವಾಗಿದೆಯೋ ಇಲ್ಲವೋ ನನಗೆ ತಿಳಿಯದು , ಏಕೆಂದರೆ title card ನೋಡಲಾಗಲಿಲ್ಲ . ಇಷ್ಟೆಲ್ಲಾ ಕೇಳಿಯೂ ಯಾರಾದರೂ ಚಿತ್ರಮಂದಿರಕ್ಕೆ ಹೋದರೆ ಅವರು ಎಂಟೆದೆಯ ಭಂಟರೆ ಸೈ! . ಆದರೆ ಕಲಾತ್ಮಕ ಚಿತ್ರ ಎಂಬ ಹಣೆ ಪಟ್ಟಿ ಕಟ್ಟಿಕೊಂಡಿರುವ ಕಾರಣ ಇದಕ್ಕೆ ರಾಜ್ಯ ಪ್ರಶಸ್ತಿ ಬಂದರೂ ಅನುಮಾನವಿಲ್ಲ . ಪ್ರಶಸ್ತಿ ಬಂದರು ಬರದಿದ್ದರು ನನಗೆ ಬೇಜಾರಿಲ್ಲ . But i need my ticket money back........ ಶಶಾಂಕ್ .ಮ .ಅ