Friday, May 14, 2010

ವಂಶವೃಕ್ಷ ಒಂದು ಸಿಂಹಾವಲೋಕನ -೨


ಕಾದಂಬರಿಯಲ್ಲಿ ಮುಖ್ಯವಾಗಿ ಬರುವ ಪಾತ್ರಗಳು ಶ್ರೀನಿವಾಸ ಶ್ರೋತ್ರಿ , ಕಾತ್ಯಾಯಿನಿ , ಸದಾಶಿವರಾಯರು , ರಾಜಾರಾಯ , ನಾಗಲಕ್ಷ್ಮಿ , ಕರುಣರತ್ನೆ , ಪೃಥ್ವಿ , ಚೀನೀ . ಈ ಪಾತ್ರಗಳನ್ನೂ ಗಮನಿಸಿದಾಗ ಒಂದು ವಿಷಯ ಸ್ಪಷ್ಟವಾಗುತ್ತದೆ . ಇವುಗಳಲ್ಲಿ ದುಷ್ಟರಾದ , ನೀಚರಾದ , ಕ್ಷುದ್ರರಾದ ಯಾವ ವ್ಯಕ್ತಿಯೂ ಗೋಚರಿಸುವುದಿಲ್ಲ . ಆದರೂ ಎಲ್ಲರ ಜೀವನದಲ್ಲೂ ಅನುಭವಿಸುವಂತ ತೊಳಲಾಟ ಮಾನಸಿಕ ವೇದನೆ ಸುಸ್ಪಷ್ಟವಾಗುತ್ತದೆ . ಇದು ಏಕೆ ಹೀಗೆ ಎಂಬುದಕ್ಕೆ ಯಾವ ಉತ್ತರವೂ ತಿಳಿಯುವುದಿಲ್ಲ , ಪ್ರಾಯಶಃ ಇದು ಇರುವುದು ಹೀಗೆ ಎಂದು ಒಪ್ಪಿಕೊಂಡು ಜೀವನವನ್ನು ನಡೆಸುವುದೊಂದೇ ದಾರಿಎಂದೆನಿಸುತ್ತದೆ .


ಶ್ರೀನಿವಾಸ ಶ್ರೋತ್ರಿಯರು ಸನಾತನ ಧರ್ಮವೇ ಮೂರ್ತಿವೆತ್ತಂತೆ ಮೂಡಿರುವ ಪಾತ್ರ . ಶ್ರೋತ್ರಿಯರ ಧೀಮಂತಿಕೆಯನ್ನು ಲೇಖಕರು ಕಾದಂಬರಿಯ ೨೦ ನೇ ಅಧ್ಯಾಯದಲ್ಲಿ ಕರುಣಾರತ್ನೆಯ ಮೂಲಕ ಮಾಡಿಸುತ್ತಾರೆ . ಆ ವಾಕ್ಯಗಳು ಹೀಗಿವೆ "ಭಾರತೀಯ ಪುರಾಣ , ಸಾಹಿತ್ಯ ಮೊದಲಾದವುಗಳನ್ನು ಅವಳು ಗ್ರಂಥಗಳಲ್ಲಿ ಓದಿ ವ್ಯಾಸಂಗ ಮಾಡಿದ್ದಳು . ಅವುಗಳಲ್ಲಿ ಬರುವ ಭೀಷ್ಮ , ವಸಿಷ್ಠ , ಯುಧಿಷ್ಠಿರ , ರಾಮ , ಮೊದಲಾದ ಪಾತ್ರಗಳ ಸ್ಪಷ್ಟ ಕಲ್ಪನೆ ಅವಳಿಗಿತ್ತು . ಯಾವುದಾದರು ವಿಚಿತ್ರ ಸನ್ನಿವೇಶದಲ್ಲಿ ಆ ಪಾತ್ರಗಳನ್ನಿಟ್ಟರೆ ಅವರು ಹೇಗೆ ವರ್ತಿಸುತ್ತಾರೆಂದು ಅವಳು ತಪ್ಪಿಲ್ಲದೆ ಹೇಳಿಬಿಡಬಲ್ಲವಲಾಗಿದ್ದಳು . ಈಗ ಶ್ರೋತ್ರಿಯರನ್ನು ನೋಡಿ ಆ ಪಾತ್ರ ನೆನಪಿಗೆ ಬರುತ್ತಿತ್ತು ". ಶ್ರೋತ್ರಿಯರು ಸನಾತನ ಧರ್ಮವನ್ನು ಕೇವಲ ಆಚರಿಸುತ್ತಿರಲಿಲ್ಲ ಬದಲಾಗಿ ಅದನ್ನೇ ಜೀವಿಸುತ್ತಿದ್ದರು ಎಂಬುದನ್ನು ಅಭಾರತೀಯವಾದ ಮತ್ತೊಂದು ಪಾತ್ರದಿಂದ ವ್ಯಕ್ತಪಡಿಸಿರುವುದು ಲೇಖಕರ ಹೆಚ್ಚುಗಾರಿಕೆ . ಭಾರಾತೀಯ ಸಂಸ್ಕೃತಿ ನಂಬಿರುವ ಪುರುಷಾರ್ಥ ಚತುಷ್ಟಯಗಳು- ಧರ್ಮಾರ್ಥಕಾಮಮೊಕ್ಷಗಳು , ಇವೇ ಶ್ರೋತ್ರಿಯರು ಪ್ರತಿಪಾದಿಸುವ ಶಾಶ್ವತವಾದ ಮೌಲ್ಯಗಳು . ಕಾತ್ಯಾಯಿನಿ ಮತ್ತೊಂದು ವಿವಾಹ ಮಾಡಿಕೊಳ್ಳುವುದೆಂದು ಯೋಚಿಸಿ ಆ ವಿಷಯವನ್ನು ಮಾವನವರಿಗೆ ತಿಳಿಸಲು ಸುಮಾರು ೧೬ ಪುಟಗಳಷ್ಟು ಧೀರ್ಘವಾದ ಪತ್ರ ಬರೆಯುತ್ತಾಳೆ . ಶ್ರೋತ್ರಿಯರು ಅದನ್ನು ನೋಡಿ ಯಾವ ಮಾತನ್ನು ಆಡದೆ ಸುಮ್ಮನಾಗುತ್ತಾರೆ . ನಂತರ ಕಾತ್ಯಾಯಿನಿಗೆ ತನ್ನ ಅಭಿಪ್ರಾಯ ತಪ್ಪು ಎಂಬ ಭಾವನೆ ಬಂದು , ಶ್ರೋತ್ರಿಯರ ಬಳಿ ಕ್ಷಮೆ ಯಾಚಿಸುತ್ತಾಳೆ . ಆಗ ಶ್ರೋತ್ರಿಯರು , ಇದು ಎಲ್ಲರಿಗೂ ಆಗುವಂತಹದ್ದು ಅದನ್ನ ಮರೆತುಬಿಡು , ಪತ್ರ ಹರಿದು ಹಾಕು ಎಂಬುವುದು ಮೇಲ್ನೋಟಕ್ಕೆ ಸಾಧಾರಣ ಮಾತಿನಂತೆ ಕಂಡರೂ , ಅದರ ಧೀಮಂತಿಕೆಯ ನೋಡಿದಾಗ ಅವು ವೇದಮಂತ್ರ ಸದೃಶವಾದ ಉಕ್ತಿ ಎಂದು ಗೋಚರಿಸುತ್ತದೆ . ಕಾಯಾಯಿನಿ ಮಗುವನ್ನು ಯಾಚಿಸಲು ಬಂದಾಗ , ನಿನಗೆ ಬೇರೆ ಗಂಡ ಸಿಕ್ಕಿರಬಹುದು ಆದರೆ ನನಗೆ ಬೇರೆ ಮಗ ಸಿಗಲಿಲ್ಲ, ಆದರು ನಿನ್ನ ಮಗು ಕರೆದುಕೊಂಡು ಹೊಗುವ ಅಧಿಕಾರ ನಿನಗಿದೆ ಎನ್ನುತ್ತಾರೆ . ಇದು ಅವರ ಸಂಸ್ಕಾರಕ್ಕೆ ಸಾಕ್ಷಿ . ಧರ್ಮವನ್ನು ಬಿಡದೆ ಅವರು ನಡೆಯುವ ಹಾದಿ ಎಲ್ಲರಿಗೂ ಮಾರ್ಗದರ್ಷಕವಾದದ್ದು . ತಮಗೆ ಆಸ್ತಿಯ ಮೇಲೆ ಹಕ್ಕಿಲ್ಲ ಎಂದು ತಿಳಿದಾಗ ಸರ್ವಸ್ವವನ್ನು ಸದ್ವಿನಿಯೋಗ ಮಾಡುತ್ತಾರೆ . ಮನೆಯ ಕೆಲಸದವಳಾದ ಲಕ್ಷ್ಮಿಗೂ ಆಸ್ತಿಯಲ್ಲಿ ಪಾಲು ನೀಡುತ್ತಾರೆ . ಪಿತೃ ಸ್ಥಾನದಲ್ಲಿ ನಿಂತು ಚೀನಿಯ ವಿದ್ಯಾಭ್ಯಾಸ ಹಾಗು ಅಗತ್ಯಗಳನ್ನು ನೋಡಿಕೊಳ್ಳುತ್ತಾರೆ . ಆಸ್ತಿಯ ಸರಿಯಾದ ನಿರ್ವಹಣೆಯಲ್ಲಿ ಅರ್ಥ ಕಾಮಗಳನ್ನು ಪರಿಪಾಲಿಸಿ , ಆಶ್ರಮ ಧರ್ಮಕ್ಕೆ ಯಾವುದೇ ಚ್ಯುತಿ ಬಾರದಂತೆ ನೋಡಿಕೊಳ್ಳುತ್ತಾರೆ . ತಮ್ಮ ಎಲ್ಲ ಜವಾಬ್ದಾರಿಗಳನ್ನು ಪಾಲಿಸಿದ ನಂತರ ಸನ್ಯಾಸ ಪರಿಗ್ರಹಿಸಲು ಮುಂದಾಗಿ , ಮೋಕ್ಷ ಮಾರ್ಗ ಹಿಡಿಯುತ್ತಾರೆ . ಹೀಗೆ ಮೌಲ್ಯಗಳ ಮೂರ್ತ ರೂಪವಾಗಿ ಕಾದಂಬರಿಯಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತದೆ ಶ್ರೋತ್ರಿಯರಪಾತ್ರ .

ಕಾತ್ಯಾಯಿನಿ ಶ್ರೋತ್ರಿಯರ ಸೊಸೆ . ಆಕೆಯ ಪತಿ ಕಪಿಲೆಯ ಪ್ರವಾಹಕ್ಕೆ ಬಲಿಯಾಗಿ ಮದುವೆಯಾದ ಒಂದೆರಡು ವರ್ಷಗಳಲ್ಲೇ ವಿಧವೆಯಾದವಳು . ತನ್ನ ಪತಿಯು ಅರ್ಧಕ್ಕೆ ನಿಲ್ಲಿಸಿದ್ದ ಬಿ. ಎ . ಪರೀಕ್ಷೆಯನ್ನು ತಾನು ಮುಗಿಸಿ ತನ್ಮೂಲಕ ಆತನ ಆತ್ಮಕ್ಕೆ ಶಾಂತಿ ದೊರಕಿಸಬೇಕೆಂಬುದು ಆಕೆಯ ನಂಬಿಕೆ . ಹೀಗಾಗಿ ಮೈಸೂರಿನ ಕಾಲೇಜಿಗೆ ಸೇರುತ್ತಾಳೆ . (ಕೊನೆಯ ಭಾಗ ಮುಂದಿನ post ನಲ್ಲಿ)
ಶಶಾಂಕ್ . ಮ .ಅ

1 comment:

  1. ಕೊನೆಯದನ್ನೂ ಬೇಗ ಪ್ರಕಟಿಸಿ. ಚೆನ್ನಾಗಿದೆ.....
    ಭೈರಪ್ಪ ಇಲ್ಲಿ ಸನಾತನ ಧರ್ಮವನ್ನು ಜೀವಿಸುತ್ತಿರುವ ಹೆಸರಲ್ಲಿ ಭೀಷ್ಮನನ್ನೂ ಸೇರಿಸುತ್ತಾರೆ. ಆದರೆ ಅವರ 'ಪರ್ವ'ದ ಹೊತ್ತಿಗೆ ಭೀಷ್ಮನ ವಾಸ್ತವ ಚಿತ್ರಣ ಅವರಿಗೆ ಸಿಕ್ಕಿದೆ.ಕಾಲಾಂತರದಲ್ಲಿ ಪಕ್ವವಾಗುವ ಒಬ್ಬ ಪ್ರಾಮಾಣಿಕ ಲೇಖಕನ ಕುರುಹು ಇದೇ.......

    ReplyDelete